ನಮ್ಮ ದೇಹದಲ್ಲಿ ಯಾವ ಪ್ರಮಾಣದಲ್ಲಿ ಆಯಾಯ ಪೋಷಕಾಂಶಗಳು, ವಿಟಮಿನ್ಗಳೆಲ್ಲಾ ಇರಬೇಕೋ ಅದೇ ಪ್ರಮಾಣದಲ್ಲಿ ಇದ್ದರೆ ಮಾತ್ರ ದೇಹ ಸುಸ್ಥಿತಿಯಲ್ಲಿರುತ್ತದೆ. ಯಾವುದೇ ಒಂದು ಅಂಶ ಕಡಿಮೆಯಾದರೂ ದೇಹಕ್ಕೆ ಬಾಧಕ. ನಮ್ಮ ದೇಹದಲ್ಲಿರುವ ಶೇ.65ರಷ್ಟು ಕಬ್ಬಿಣದಂಶ ಹಿಮೋಗ್ಲೋಬೀನ್ ಆಗಿರುತ್ತದೆ. ಇದು ರಕ್ತದಲ್ಲಿ ಆಮ್ಲಜನಕ ಪೂರೈಕೆಗೆ ಕಾರಣವಾಗುತ್ತದೆ. ಕಬ್ಬಿಣದ ಅಂಶ ದೇಹದಲ್ಲಿ ಕಡಿಮೆಯಾದರೆ ಅದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಕಬ್ಬಿಣದಂಶ ಕೊರತೆಯುಂಟಾಗಿ, ಅನೀಮಿಯಾ ಕೊರತೆ ಉಂಟಾಗುವ ಮೊದಲು ಕಾಣಿಸಿಕೊಳ್ಳುವ ಗುಣಲಕ್ಷಣಗಳು: ಸುಸ್ತು, ತಲೆಸುತ್ತು, ಕಳೆಗುಂದಿದ ಚರ್ಮದ ಬಣ್ಣ, ಕೂದಲುದುರುವಿಕೆ, ಕಿರಿಕಿರಿ, ವೀಕ್ನೆಸ್, ಮಣ್ಣು, ಮರಳು ಮುಂತಾದವುಗಳನ್ನು ತಿನ್ನುವ ಚಟ ಇಂತಹ ಗುಣಲಕ್ಷಣಗಳು ಕಂಡುಬಂದಲ್ಲಿ ತತ್ಕ್ಷಣವೇ ಡಾಕ್ಟರನ್ನು ಸಂಪರ್ಕಿಸಬೇಕು. ಇದರೊಂದಿಗೆ ಆಹಾರದಲ್ಲಿ ಆರೋಗ್ಯಪೂರ್ಣವಾದ ಡಯಟ್ ಪಾಲಿಸಿದರೆ ಕಬ್ಬಿಣದಂಶದಿಂದ ಕೊರತೆಯಿಂದ ಉಂಟಾಗುವ ಅನೇಕ ತೊಂದರೆಗಳಿಂದ ಪಾರಾಗಬಹುದು.
ಮಾಂಸಾಹಾರ ಹಾಗೂ ಸಸ್ಯಾಹಾರಗಳೆರಡೂ ಕಬ್ಬಿಣದ ಅಂಶವನ್ನು ದೇಹಕ್ಕೆ ಪೂರೈಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನೈಸರ್ಗಿಕವಾದ ಆಹಾರಪದ್ಧತಿಗೆ ಗಮನ ನೀಡುವುದು ಅಗತ್ಯ. ಉತ್ತಮ ಆಹಾರಕ್ರಮದಿಂದ ಮಾತ್ರ ದೇಹದಲ್ಲಿ ಕಬ್ಬಿಣದಂಶ ಶೇಖರಣೆಯಾಗಲು ಸಾಧ್ಯ.
ಕೆಲವೊಂದು ಸೊಪ್ಪುಗಳಲ್ಲಿ ಅಧಿಕಾಂಶ ಕಬ್ಬಿಣದ ಸತ್ವಗಳಿರುತ್ತದೆ.ಉದಾಹರಣೆಗೆ ಪಾಲಕ್ ಸೊಪ್ಪು. ಪಾಲಕ್ ಸೊಪ್ಪು ಅತ್ಯಂತ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ ಹಾಗೂ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶವನ್ನು ಒಳಗೊಂಡಿದೆ. ಒಂದು ಬಾರಿಯ ಸೇವನೆಯಿಂದ 3.6 ಮಿಲಿ ಗ್ರಾಂ ಕಬ್ಬಿಣದ ಅಂಶ ಸಿಗುತ್ತದೆ.
ದೇಹದಲ್ಲಿ ಕಬ್ಬಿಣದಂಶ ಹೆಚ್ಚಾಗಲು, ವಿಟಮಿನ್ ಸಿ ಹೊಂದಿರುವ ಆಹಾರಪದಾರ್ಥಗಳನ್ನು ಹೆಚ್ಚು ತೆಗೆದುಕೊಳ್ಳುವುದು ಅಗತ್ಯ. ಟೊಮೇಟೊ, ಸೊಪ್ಪು, ಕಾಳುಮೆಣಸು ಹಾಗೂ ಇತರೆ ಹಸಿರು ತರಕಾರಿಗಳ ಜೊತೆ ಸೇವಿಸಬಹುದು. ಕಿತ್ತಳೆ ಹಣ್ಣಿನ ಜ್ಯೂಸ್ ಕೂಡಾ ಉತ್ತಮ.
ಸಮುದ್ರದಲ್ಲಿ ಸಿಗುವ ಕೆಲವೊಂದು ಮೀನು ಹಾಗೂ ಇತರೆ ಮಾಂಸಹಾರಗಳೂ ಕೂಡಾ ಕಬ್ಬಿಣದಂಶವನ್ನು ನಮ್ಮ ದೇಹದಲ್ಲಿ ಹೆಚ್ಚು ಮಾಡುತ್ತದೆ. ಮಾಂಸಾಹಾರಗಳಲ್ಲಿ ಹೆಚ್ಚಿನ ಕಬ್ಬಿಣದಂಶ ಕಂಡುಬರುತ್ತದೆ. ಹಾಗಾಗಿ ಮಾಂಸಾಹಾರಿಗಳಲ್ಲಿ ಕಬ್ಬಿಣದ ಕೊರತೆ ಹೆಚ್ಚಾಗಿ ಕಂಡುಬರುವುದಿಲ್ಲ. ಕೋಳಿ, ಮಟನ್ ಮುಂತಾದವುಗಳ ಹೃದಯ ಹಾಗೂ ಲಿವರ್ ಅಧಿಕ ಕಬ್ಬಿಣದ ಅಂಶವನ್ನು ಒಳಗೊಂಡಿರುತ್ತದೆ. ಹಾಗಾಗಿ ಕೆಲವು ಪ್ರಾಣಿಗಳ ದೇಹದ ಅಂಗಾಂಗಗಳು ಕಬ್ಬಿಣದ ಅಂಶದ ಗಣಿಯಾಗಿರುತ್ತದೆ.
ದೈನಂದಿನ ಅಗತ್ಯತೆಗೆ ತಕ್ಕಂತೆ ಶೇಕಡ 36% ಕಬ್ಬಿಣದ ಅಂಶ ಇವುಗಳಿಂದ ಲಭ್ಯವಾಗುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಒಂದು ವೇಳೆ ನಿಮಗೆ ಕಬ್ಬಿಣದ ಅಂಶದ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಈ ಮೇಲಿನ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಹುದು.
ಮನುಷ್ಯನೊಬ್ಬನ ದೇಹದಲ್ಲಿ ಕಬ್ಬಿಣದಂಶ ಪೂರೈಕೆಯಾಗುತ್ತಲೇ ಇರುತ್ತದೆ. ಮುಂದಿನ ಬಳಕೆಗಾಗಿ ಹೆಚ್ಚಿನ ಕಬ್ಬಿಣದಂಶ ದೇಹದಲ್ಲಿ ಶೇಖರಣೆಗೊಂಡಿರುತ್ತದೆ. ಹೀಗಾಗಿ ಕಬ್ಬಿಣದ ಓವರ್ಲೋಡ್ ಉಂಟಾಗುತ್ತದೆ. ಅದು ದೇಹಕ್ಕೆ ಹಾನಿಕರ. ಹಾಗಾಗಿ ಸಮಪ್ರಮಾಣದ ಸೇವನೆ ಅತ್ಯಗತ್ಯ.
– ಅಹಲ್ಯಾ